ಅಮರಾವತಿ: ಆಂಧ್ರಪ್ರದೇಶದಲ್ಲಿನ ಸಣ್ಣ ಹಳ್ಳಿಯೊಂದರಲ್ಲಿ 11 ಆದಿವಾಸಿ ಮಹಿಳೆಯರನ್ನು ಬಂದೂಕು ತೋರಿಸಿ ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಕ್ಸಲ್ ನಿಗ್ರಹ ವಿಶೇಷ ಪೊಲೀಸ್ ಪಡೆಯ ತಂಡದ 13 ಆರೋಪಿ ಪೊಲೀಸರನ್ನು ವಿಶೇಷ ನ್ಯಾಯಾಲಯವೊಂದು ಗುರುವಾರ ಖುಲಾಸೆಗೊಳಿಸಿದೆ. 15 ವರ್ಷಗಳ ಬಳಿಕ ಈ ಪೊಲೀಸರು ಆರೋಪ ಮುಕ್ತರಾಗಿದ್ದಾರೆ.
ತಮ್ಮ ಕರ್ತವ್ಯವನ್ನು ಕಳಪೆಯಾಗಿ ನಿರ್ವಹಿಸಿದ್ದಾರೆ ಎಂದು ತನಿಖಾಧಿಕಾರಿ ವಿರುದ್ಧ ಕಿಡಿಕಾರಿದ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗಾಗಿ ಇರುವ ವಿಶೇಷ ನ್ಯಾಯಾಲಯ ಹಾಗೂ XI ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಅವರನ್ನು ರಾಜ್ಯ ಸರ್ಕಾರ ಶಿಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.
ಈ ಪ್ರಕರಣದಲ್ಲಿ 15 ವರ್ಷ ಕಾನೂನು ಹೋರಾಟ ನಡೆಸಿದ ಸಂತ್ರಸ್ತೆಯರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಸಮರ್ಪಕ ಪರಿಹಾರ ಪಾವತಿಸುವಂತೆ ವಿಶೇಷ ನ್ಯಾಯಾಧೀಶ ಎಲ್ ಶ್ರೀಧರ್ ಆದೇಶಿಸಿದ್ದಾರೆ. ಅವಿಭಜಿತ ವಿಶಾಖಪಟ್ಟಣ ಜಿಲ್ಲೆಯ ಅಡಿಯಲ್ಲಿನ ಹಳ್ಳಿಯೊಂದರಲ್ಲಿ ವಿಶೇಷ ದಳದ ಪೊಲೀಸರ 30 ಸದಸ್ಯರ ತಂಡವು 2007ರ ಆಗಸ್ಟ್ 30ರಂದು ನಸುಕಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು.
13 ಮಂದಿ ಪೊಲೀಸರು ತಮ್ಮ ಮೇಲೆ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿದ್ದರು ಎಂದು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಸಮೂಹಕ್ಕೆ (ಪಿವಿಟಿಜಿ) ಸೇರಿದ 11 ಮಹಿಳೆಯರು ಆರೋಪಿಸಿದ್ದರು. ಪುರುಷರು ಕೆಲಸಕ್ಕೆಂದು ಹೊಲಗಳಿಗೆ ತೆರಳಿದ ಕೆಲವೇ ಸಮಯದಲ್ಲಿ ಹಳ್ಳಿಯೊಂದಕ್ಕೆ ನುಗ್ಗಿದ ಪೊಲೀಸರ ತಂಡವು ಮಹಿಳೆಯರನ್ನು ಗುಡಿಸಿಲಿನ ಒಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದರು ಎಂದು ದೂರಿದ್ದರು. ಮಧ್ಯಾಹ್ನ ಮನೆಗೆ ಮರಳಿದ ಗಂಡಂದಿರ ಬಳಿ ಮಹಿಳೆಯರು ಈ ಬಗ್ಗೆ ತಿಳಿಸಿದ್ದರು. ಅವರು ತಮ್ಮ ಗ್ರಾಮದ ಮುಖ್ಯಸ್ಥರನ್ನು ಸಂಪರ್ಕಿಸಿ, ಅವರ ಮೂಲಕ ಆಗಿನ ಬಿಎಸ್ಪಿ ಶಾಸಕ ಎಲ್ ರಾಜಾ ರಾವ್ ಅವರನ್ನು ಭೇಟಿ ಮಾಡಿದ್ದರು. ಬಳಿಕ ಶಾಸಕರು ಹಾಗೂ ಬುಡಕಟ್ಟು ಜನರು ಮಹಿಳೆಯರನ್ನು ಜಿಲ್ಲಾಧಿಕಾರಿ ಬಳಿ ಕರೆದೊಯ್ದಿದ್ದರು. ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಅವರು ಸೂಚಿಸಿದ್ದರು. ಐಪಿಸಿ ಸೆಕ್ಷನ್ 376 (2) (g) ಹಾಗೂ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಸೆಕ್ಷನ್ 3 (2) (v) ಅಡಿ ಪ್ರಕರಣ ದಾಖಲಿಸಲಾಗಿತ್ತು.
ತನಿಖಾಧಿಕಾರಿ ವಿರುದ್ಧ ತನಿಖೆಗೆ ಆದೇಶ
ಆನಂದ ರಾವ್ ಮತ್ತು ಶಿವಾನಂದ ರೆಡ್ಡಿ ಇಬ್ಬರೂ ಸಲ್ಲಿಸಿದ್ದ ತನಿಖಾ ವರದಿಗಳು ಅಸಮರ್ಪಕವಾಗಿವೆ ಎಂದು ನ್ಯಾಯಾಧೀಶರು ದೋಷಗಳನ್ನು ಗುರುತಿಸಿದ್ದರು. ವಿಚಾರಣೆ ನಡೆಯುವಾಗಲೇ ರಾವ್ ಅವರು ನಿಧನರಾಗಿರುವುದರಿಂದ ಪುರಾವೆಗಳ ಕೊರತೆಗೆ ಹಾಗೂ ಆರೋಪಿ ಪೊಲೀಸರ ಖುಲಾಸೆಗೆ ರೆಡ್ಡಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ತನಿಖೆಯ ದಾರಿ ತಪ್ಪಿಸಲು ಮತ್ತು ಸಂತ್ರಸ್ತೆಯರು ಹಾಗೂ ದೂರುದಾರರ ಹೇಳಿಕೆಗಳನ್ನು ಬದಲಿಸಲು ಪ್ರಯತ್ನಿಸಿದ್ದಕ್ಕಾಗಿ ತನಿಖಾಧಿಕಾರಿಗಳ ವಿರುದ್ಧದ ದೂರುಗಳ ವಿಚಾರಣೆ ನಡೆಸಲು ಉನ್ನತ ಸಮಿತಿಗೆ ಕೋರ್ಟ್ ಶಿಫಾರಸು ಮಾಡಿದೆ.
ಕಳಪೆ ತನಿಖೆಯಿಂದಾಗಿ ಪೊಲೀಸರು ಖುಲಾಸೆಗೊಂಡಿದ್ದಾರೆ. ಸಂತ್ರಸ್ತೆಯರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ಆದಷ್ಟು ಶೀಘ್ರವೇ ಅವರಿಗೆ ಪರಿಹಾರ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಆರೋಪ ಮಾಡಿದ 11 ಆದಿವಾಸಿ ಮಹಿಳೆಯರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.