ಬೆಂಗಳೂರು: ಬಿಜೆಪಿ ನಾಯಕರು ಎರಡೂ ಸ್ಥಾನಗಳಿಗೆ ಟವೆಲ್ ಹಾಕಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಆರ್ ಅಶೋಕ ಪಕ್ಷದ ವರಿಷ್ಠರನ್ನು ಸಂತೋಷವಾಗಿಡಲು ಸರ್ಕಾರದ ಬಗ್ಗೆ ಏನನ್ನಾದರೂ ಹೇಳುತ್ತಿರಬೇಕಾಗುತ್ತದೆ, ಇಲ್ಲದಿದ್ದರೆ ಯಾಕೆ ಸುಮ್ಮನಿರುವೆ ಅಂತ ಪ್ರಶ್ನಿಸುತ್ತಾರೆ ಎಂದರು.
ಇನ್ನೂ ತಾನು ಮೊದಲು ಬಿಜೆಪಿಯಲ್ಲಿದ್ದ ಕಾರಣ ಈಗಲೂ ಅಲ್ಲಿ ಸ್ನೇಹಿತರಿದ್ದಾರೆ, ಅವರು ಹೇಳುವ ಪ್ರಕಾರ ಪಕ್ಷದ ಅಧ್ಯಕ್ಷ ಸ್ಥಾನದ ಜೊತೆ ವಿರೋಧ ಪಕ್ಷದ ನಾಯಕನ ಸ್ಥಾನವೂ ಅಲ್ಲಾಡುತ್ತಿದೆ,ಬಿಜೆಪಿ ನಾಯಕರು ಎರಡೂ ಸ್ಥಾನಗಳಿಗೆ ಟವೆಲ್ ಹಾಕಿದ್ದಾರೆ, ತಾನು ಅಶೋಕ ಅವರಿಗೆ ನೀಡುವ ಸಲಹೆಯೆಂದರೆ, ತಮ್ಮ ತಟ್ಟೆಯಲ್ಲಿ ಸತ್ತುಬಿದ್ದಿರುವ ಹೆಗ್ಗಣವನ್ನು ಮೊದಲು ತೆಗೆಯಲಿ ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ನಂತರ ಯೋಚನೆ ಮಾಡಲಿ ಎಂದು ಸವದಿ ಹೇಳಿದರು.