ಮೈಸೂರು : ನೆಂಟರನ್ನು ಕರೆದ ಮೇಲೆ ಒಳ್ಳೆ ಊಟ ಹಾಕಿಸಬೇಕು. ಈ ಬಾರಿ ಸಂಪ್ರದಾಯ ಮಿಶ್ರಿತ ಅದ್ದೂರಿ ದಸರಾವನ್ನು ಆಚರಿಸಲು ಚಿಂತನೆ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ಸಿ ಮಹದೇವಪ್ಪ ತಿಳಿಸಿದರು. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಎಚ್ಸಿ ಮಹದೇವಪ್ಪ,
ಈ ಬಾರಿ ಅದ್ಧೂರಿಯಾಗಿ ದಸರಾ ಮಹೋತ್ಸವ ಆಚರಿಸಲು ಚಿಂತನೆ ನಡೆದಿದೆ. ಈ ಹಿಂದೆ ಕೊರೊನಾದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ರಾಜ್ಯ ಸುಭಿಕ್ಷವಾಗಿದೆ, ಹೊಸ ಸರ್ಕಾರ ಬಂದಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಮೈಸೂರು ಸಂಸ್ಕೃತಿ, ರಾಜ ಪರಂಪರೆ ಉಳಿಸಿಕೊಂಡು ದಸರಾ ಆಚರಣೆ ಮಾಡಲಾಗುತ್ತದೆ ಎಂದರು.
ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಜುಲೈ 31 ರಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಎಚ್ಸಿ ಮಹದೇವಪ್ಪ ತಿಳಿಸಿದರು. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಮತ್ತು ಕೃಷಿ ಚಟುವಟಿಕೆ ಪ್ರಕ್ರಿಯೆ ಕುರಿತು ಮಾತನಾಡಿದ ಸಚಿವ ಎಚ್ಸಿ ಮಹದೇವಪ್ಪ, ಪೂರ್ವ ಮುಂಗಾರು ಮಳೆ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಬಿದ್ದಿದೆ. ವಾಡಿಕೆಯಂತೆ ಮಾರ್ಚ್ ನಿಂದ ಮೇ ವರಗೆ 198 ಮಿಮೀ ಇತ್ತು. ಈ ಬಾರಿ 207 ಮಿಮೀಗೂ ಹೆಚ್ಚು ಮಳೆಯಾಗಿದೆ. ಅಂದರೆ ಶೇ.4.59ರಷ್ಟು ಹೆಚ್ಚು ಮಳೆ ಆಗಿದೆ ಎಂದು ಹೇಳಿದರು.