ಹುಬ್ಬಳ್ಳಿ : ಮುಖ್ಯಮಂತ್ರಿ ರೇಸ್ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಈಗಲ್ಲ ಮೊದಲಿನಿಂದಲೂ ಇದ್ದಾರೆ. ಅದರಲ್ಲಿ ಪ್ರಶ್ನೆಯೇ ಇಲ್ಲ. ಇದಕ್ಕೆಲ್ಲ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆ ಸಮಯಕ್ಕಾಗಿ ಕಾಯಬೇಕಷ್ಟೇ ಎಂದು ಸಚಿವ ಸತೀಶ ಜಾರಕಿಹೂಳಿ ಪ್ರತಿಕ್ರಿಯಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರೇ ಹೇಳಿದ್ದಾರೆ. ದೇಶದ ನಾನಾ ರಾಜ್ಯಗಳ ಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಿದೆ. ಈಗ ತಕ್ಷಣ ಮಾಡಲು ಆಗದೆ ಇರಬಹುದು, ಆದ್ರೆ ಆಗೇ ಆಗುತ್ತೆ. ಅವರು ಯಾವಾಗ ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ. ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸುವ ಅಧಿಕಾರ ನಮಗಿಲ್ಲ. ಅದನ್ನು ಪಕ್ಷದ ಹೈಕಮಾಂಡ್ ನೋಡುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಪ್ರಬಲ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ, ಚರ್ಚೆ ಆಗಿಲ್ಲ, ಸಮಯ ಬಂದಾಗ ನೋಡೋಣ. ನಾನಂತೂ ಯಾವುದೇ ರೀತಿಯ ಆಕಾಂಕ್ಷೆ ಇಲ್ಲ, ಸಂದರ್ಭ ಬಂದಾಗ ನೋಡೋಣ. ನಾನು ಅಧ್ಯಕ್ಷ ಆಗಬೇಕು ಅಂತ ನನ್ನ ಹಿಂಬಾಲಕರು, ಪ್ರಮುಖರು ಇಂಗಿತ ವ್ಯಕ್ತಪಡಿಸಿದ್ದಾರೆ, ಇದು ಸಹಜ ಕೂಡ ಎಂದರು. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಲ್ಲ. ಆದರೆ ವಿಳಂಭ ಆಗಿರಬಹುದು. ನಾವು ಇದೇ ದಿನ ಕೊಡ್ತೀವಿ ಅಂತಿಲ್ಲ. ಕೆಲ ಸಲ ಲೇಟ್ ಆಗಿರಬಹುದು. ಇಂತಹ ದಿನವೇ ಕೊಡ್ತೀವಿ ಅಂತಿಲ್ಲ ಎಂದರು.
ಇಡಿ ಇಕ್ಕಳಲ್ಲಿ ಸಿಗಿಸಲು ಹುನ್ನಾರ ವಿಚಾರಕ್ಕೆ ಪ್ರತಿಕ್ರಯಿಸಿ, ಬಿಜೆಪಿ ಕೈಯಲ್ಲಿ ಏನು ಇಲ್ಲ. ಇಡಿ ಒಂದು ಏಜೆನ್ಸಿ. ಇದಕ್ಕೆ ಸಾಕ್ಷಾಧಾರಗಳು ಇಲ್ಲ. ಆದರೆ ನಾವು ಮುಡಾ ಪ್ರಕರಣದಲ್ಲಿ ಇಡೀ ದುರುಪಯೋಗ ಅಂತ ಹೇಳೋಕೆ ಆಗಲ್ಲ . 14 ಸೈಟ್ ಗಳ ಬಗ್ಗೆನೇ ಹೆಚ್ಚಿನ ವಿಷಯ ಪ್ರಸ್ತಾಪ ಮಾಡ್ತಿರೋದೇ ರಾಜಕೀಯ. ಇದೆ ರೀತಿ 2000 ಸೈಟ್ ಗಳು ಹಂಚಿಕೆ ಆಗಿವೆ. ಆ ಬಗ್ಗೆ ಯಾಕೆ ಚರ್ಚೆ ಆಗ್ತಿಲ್ಲ. ಸಿಎಂ ಅವರ ಪ್ರಕರಣ ಬೆಳಕಿಗೆ ಬಂದ ನಂತರ ಇದು ರಾಜಕೀಯ ಅಂತ ನಾವೇ ಹೇಳಿದ್ವಿ ಎಂದರು.
