ಶಿವಮೊಗ್ಗ: ರಾಧಾಮೋಹನ್ ಅಗರ್ವಾಲ್ ಅವರಿಗೆ ನಾನು ಯಾರೆಂದು ಗೊತ್ತಿಲ್ಲವೆಂದ ಮೇಲೆ ಈ ಹಿಂದೆ ನನ್ನ ಮನೆಗೇಕೆ ಬಂದಿದ್ದರು? ನನ್ನ ಸಿದ್ಧಾಂತ ಸರಿ ಇದೆ ಎಂದು ಏಕೆ ಒಪ್ಪಿಕೊಂಡಿದ್ದರು? -ಇದು ಈಶ್ವರಪ್ಪ ಅಂದರೆ ಯಾರು ಎಂದು ನನಗೆ ಗೊತ್ತಿಲ್ಲ ಎಂದಿದ್ದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ನೀಡಿರುವ ತಿರುಗೇಟು. ಇದೇವೇಳೆ ಜೆಡಿಎಸ್ ಜೊತೆಗೆ ಮೈತ್ರಿ ಆದರೆ ಒಳಒಪ್ಪಂದ ಯಾರ ಜೊತೆಗೆ ಎಂಬುದನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗದ ತಮ್ಮ ಚುನಾವಣೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಎಲ್ಲವುಗಳನ್ನು ಯೋಚಿಸಿಯೇ ರಾಜಕೀಯ ಬಲಿದಾನಕ್ಕೂ ಸಿದ್ಧ ಅಂದುಕೊಂಡೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಮಗನಿಗೆ ಭವಿಷ್ಯ ಸಿಗಲ್ಲ, ನನಗೂ ಭವಿಷ್ಯ ಇಲ್ಲ ಎಂದೇ ತೀರ್ಮಾನಿಸಿ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಜನ ಕೈಹಿಡಿಯಲಿದ್ದಾರೆ. ಇದು ಮೊದಲ ಪ್ರಯತ್ನ ಗೆಲ್ಲುವ ವಿಶ್ವಾಸ ಇದೆ. ಶಿವಮೊಗ್ಗದಲ್ಲಿ ಕನಿಷ್ಠ ಒಂದು ಲಕ್ಷ ಮತಗಳಿಂದ ನಾನು ಗೆಲ್ಲುತ್ತೇನೆ ಎಂದರು.