ಚಿಕ್ಕಬಳ್ಳಾಪುರ: ಲೋಕಚುನಾವಣೆ ನಂತರ ರಾಜ್ಯ ಸರ್ಕಾರ ಇರಲ್ಲ ಅಂತ ದೇವೇಗೌಡರು ಹಗಲುಗನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿರುಗೇಟು ಕೊಟ್ಟಿದ್ದಾರೆ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಕ್ಷಾ ರಾಮಯ್ಯನವರ (Raksha Ramaiah) ಪರವಾಗಿ ಸಿಎಂ ಸಿದ್ದರಾಮಯ್ಯನವರು ಇಂದು ಚುನಾವಣಾ ಪ್ರಚಾರ ನಡೆಸಿದರು. ಚಿಕ್ಕಬಳ್ಳಾಪುರ ನಗರ ಸೇರಿದಂತೆ ಬಾಗೇಪಲ್ಲಿ ಗೌರಿಬಿದನೂರು ಹಾಗೂ ದೊಡ್ಡಬಳ್ಳಾಪುರದಲ್ಲಿ ಸಿದ್ದರಾಮಯ್ಯ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಸಿಎಂ, ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ ಅಂದಿದ್ದಾರೆ. ದೇವೇಗೌಡರೇ ನಿಮ್ಮ ಭ್ರಮೆ. ಜನರ ಆಶೀರ್ವಾದದಿಂದ 136 ಸ್ಥಾನ ಗೆದ್ದಿದೆ. ಬಿಜೆಪಿ 66 ಜೆಡಿಎಸ್ 19 ಅಷ್ಟೇ. ಸರ್ಕಾರ ಪತನ ಆಗುತ್ತೆ ಅಂತ ದೇವೇಗೌಡರು ಹಗಲು ಕನಸು ಸರಿನಾ..? ಎಂದು ಜನರಲ್ಲಿ ಪ್ರಶ್ನೆ ಮಾಡಿದರು.
ಈ ಬಾರಿ ಜೆಡಿಎಸ್ – ಬಿಜೆಪಿ (JDS- BJP) ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಮೊದಲು ಬಿಜೆಪಿ ಹಾಗೂ ಜೆಡಿಎಸ್ ಹಾವು ಮುಂಗುಸಿ ತರ ಇದ್ದರು. ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ವಾಚಾಮಗೋಚರವಾಗಿ ಬಿಜೆಪಿಯನ್ನ ಟೀಕೆ ಮಾಡುತ್ತಿದ್ದರು. ಜೆಡಿಎಸ್ ಉಳಿವಿಗಾಗಿ ತೆಗಳಿದ ಬಿಜೆಪಿ ಪಕ್ಷದ ಜೊತೆಯಲ್ಲಿ ಚುನಾವಣಾ ಹೊಂದಾಣಿಕೆ ಮಾಡಿಕೊಂಡು 3 ಸ್ಥಾನ ಪಡೆದು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ 2019 ರಲ್ಲಿ ಹಾಸನದಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಂ ಅಂದ್ರು.
ಅದಕ್ಕೆ ದೇವೇಗೌಡರು ಕೆಂಡಾಮಂಡಲರಾದರು. ರಾಹುಲ್ ಗಾಂಧಿ ಸಿದ್ದರಾಮಯ್ಯ ನವರ ಮಾತು ಕೇಳಿ ಹೇಳಿದ್ದಾರೆ ಅಂತ ಹೇಳಿದ್ರು ನಾವ್ ಕೋಮುವಾದಿ ಬಿಜೆಪಿ ಜೊತೆ ಸೇರಲ್ಲ ಅಂದ್ರು. ಮುಂದಿನ ಜನ್ಮ ಇದ್ರೆ ಮುಸ್ಲಿಂ ಆಗಿ ಹುಟ್ತೀನಿ ಅಂದ್ರು. ಎರಡನೇ ಬಾರಿ ಮೋದಿ ಪ್ರಧಾನಿ ಆದರೆ ಈ ದೇಶವನ್ನು ಬಿಡ್ತೀನಿ ಅಂದ್ರು. ಆದರೆ ದೇವೇಗೌಡರು ಮಾಡಿದ್ದೇನು ಅಂತ ಪ್ರಶ್ನೆ ಮಾಡಿದರು. ಅವತ್ತು ಎಚ್ ಡಿ ದೇವೇಗೌಡರು ಆಡಿದ ಮಾತುಗಳು ಏನು ಈಗ ಮಾಡ್ತಿರೋದೇನು..? ಈಗ ಹಾಯ್ ಬಾಯ್ ಅಂತ ಬಿಜೆಪಿ ಸೇರಿಕೊಂಡಿದ್ದಾರೆ. ಇದು ದೇವೇಗೌಡರ ಇಬ್ಬಂದಿತನ ತೋರಿಸುತ್ತದೆ ಎಂದು ಕಿಡಿಕಾರಿದರು.