ತಾಲೂಕಿನ ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಮದವೇರಿದ ಕಾಡಾನೆಗಳ ಗುದ್ದಾಟದಿಂದ ಮಲೆನಾಡಿಗರು ನಿಜಕ್ಕೂ ತತ್ತರಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಗುರುವಾರದಿಂದ ಮೂರನೇ ಸುತ್ತಿನ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲು ಸನ್ನದ್ಧವಾಗಿದೆ. ಸುಮಾರು ಎಂಟು ಸಾಕಾನೆಗಳು ಪುಂಡಾನೆಗಳನ್ನು ಖೆಡ್ಡಾಕ್ಕೆ ಕೆಡವಲು ಸಿದ್ಧವಾಗಿದೆ. ಎನ್ನಲಾಗಿದೆ.
ಕುಶಾಲನಗರದ ದುಬಾರೆ ಆನೆ ಶಿಬಿರ ಮತ್ತು ನಾಗರಹೊಳೆ ಆನೆ ಶಿಬಿರದಿಂದ ಎಂಟು ಆನೆಗಳು ಆಗಮಿಸುವ ಮುಲಕ ಪುಂಡಾನೆಗಳನ್ನು ಖೆಡ್ಡಾಕ್ಕೆ ಕೆಡವಲು ಸಿದ್ಧತೆಯಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯೊಂದಿಗೆ ಮಾತನಾಡಿದ ಬೇಲೂರು ಅರಣ್ಯ ಇಲಾಖೆ ವಲಯಾಧಿಕಾರಿ ವಿನಯಕುಮಾರ್, ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳ ಆದೇಶದಂತೆ ಸದ್ಯ ಕುಶಾಲನಗರದ ದುಬಾರೆ ಆನೆ ಶಿಬಿರದಿಂದ ಪ್ರಶಾಂತ್,
ಧನಂಜಯ್. ಸುಗ್ರೀವಾ, ನಾಗರಹೊಳೆ ಆನೆ ಶಿಬಿರದಿಂದ ಮೈಸೂರು ಅಂಬಾರಿ ಹೊರುವ ಅಭಿಮನ್ಯು, ಅಶ್ವತ್ಥಾಮ ಆನೆಗಳು ಕೂಡ ಆಗಮಿಸಲಿವೆ ಎಂದು ತಿಳಿಸಿದರು. ಸಾಕಾನೆಗಳೊಂದಿಗೆ ಇಬ್ಬರು ನುರಿತ ವೈದ್ಯರು ಮತ್ತು ಸಕಲ ಸಿದ್ದತೆಯೊಂದಿಗೆ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಮಲೆನಾಡಿಗರು ಇಲಾಖೆಯ ಕಾವ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.