ಬೆಳಗಾವಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ವಾತಾವರಣ ಅನುಕೂಲಕರವಾಗಿದೆ. ನಾನು ಈ ಹಿಂದೆ ಹೇಳಿದಂತೆ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ನಾವು ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ” ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ”ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆಗೆ ಬಂದಿದ್ದೇವೆ. ಮಾಜಿ ಸಚಿವ ಭೈರತಿ ಬಸವರಾಜ್ ಹಾಗೂ ಲೇಹರ್ ಸಿಂಗ್ ಜೊತೆಗೆ ಬಂದಿದ್ದಾರೆ. ಈಗ ಮೆರವಣಿಗೆ ಆರಂಭವಾಗಿದ್ದು, ಅವರ ಜೊತೆ ಸೇರಿ ನಾಮಪತ್ರ ಸಲ್ಲಿಸುತ್ತೇನೆ. ಇದಾದ ಬಳಿಕ ಕೊಪ್ಪಳಕ್ಕೆ ಹೋಗುತ್ತೇನೆ” ಎಂದರು.
ಕೊಪ್ಪಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ”ಆ ವಿಷಯ ಗೊತ್ತಾಗಿದೆ. ಅವರು ಇಷ್ಟಪಟ್ಟು ಹೋಗುತ್ತಿದ್ದಾರೆ. ಇವತ್ತು ಹೋಗಿ ಅವರನ್ನು ಭೇಟಿಯಾಗಿ ಮಾತನಾಡಬೇಕು ಎಂದುಕೊಂಡಿದ್ದೆ. ಇಂತಹ ಘಟನೆಗಳು ಸ್ವಾಭಾವಿಕ” ಎಂದರು.
ಬೆಳಗಾವಿಯಲ್ಲಿ ಜಾತಿ ಆಧಾರದ ಮೇಲೆ ಪಾಲಿಟಿಕ್ಸ್ ನಡೆಯುತ್ತಿರುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರು ಜಾತಿ ಆಧಾರದ ಮೇಲೆ ಬೇಕಾದರೆ ರಾಜಕಾರಣ ಮಾಡಿಕೊಳ್ಳಲಿ ನಾವು, ಹಿಂದೂ, ಮುಸ್ಲಿಂ ಬೇಧ ಭಾವ ಇಲ್ಲ. ಎಲ್ಲರ ಬೆಂಬಲದೊಂದಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.